ಭಾನುವಾರ, ಜುಲೈ 19, 2009

ಬಾ ಮಳೆಯೇ ಬಾ....

ರಾಜ್ಯದ ವಿವಿದೆಡೆ ಸಮೃದ್ಧವಾಗಿ ಮಳೆಯಾಗುತ್ತಿದೆ. ಈ ಬಾರಿ ಮುಂಗಾರು ತಡವಾಗಿ ಆರಂಭವಾದರೂ ದಿನದಿಂದ ದಿನಕ್ಕೆ ಪಡೆದುಕೊಂಡ ಬಿರುಸು, ರಾಜ್ಯದ ಪ್ರಮುಖ ಜಲಾಶಯಗಳು ಮೈದುಂಬಿಕೊಳ್ಳಲು ಕಾರಣವಾಗಿದೆ. ಮುಂಗಾರು ತಡವಾದಾಗ ಅಲ್ಲಲ್ಲಿ ರೈತರ ಬೆಳೆಗಳಿಗೆ ರೋಗ ರುಜಿನ ತಗುಲುವ ಬೀತಿಯ ಜೊತೆಗೆ, ಬೆಳೆ ಒಣಗಿ ಹೋಗುವ ಸ್ಥಿತಿ ಸೃಷ್ಠಿಯಾಗಿತ್ತು. ಮುಂಗಾರು ಆರಂಬದ ಮುನ್ನ ದಿನಗಳ ಬಿಸಿಲ ತೀವ್ರತೆಯೂ ಸಹಾ ದಕ್ಷಿಣದ ಜಿಲ್ಲೆಗಳಲ್ಲಿ ಹಿಂದಿಗಿಂತ ಹೆಚ್ಚಾಗಿತ್ತು. ಮುಂದೇನೋ ಎಂದು ರೈತ ಇಲ್ಲಿ ಕೈ ಹೊತ್ತು ಕುಳಿತಿದ್ದರೆ, ಮುಂದಿನ ಪರಿಸ್ಥಿತಿ ಏನು? ಬಿತ್ತನೆ ಬೀಜ, ರಸಗೊಬ್ಬರ,ವಿದ್ಯುತ್ಕೊರತೆ ಬರಲಿರುವ ದಿನಗಳಿಗೆ ಹೇಗೆ ಸಜ್ಜಾಗಬೇಕು? ಎಂದು ಚಿಂತಿಸದೇ ಹೊಣೆಗೇಡಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಂಪುಟ ದರ್ಜೆ ಸಚಿವರು ಮಳೆಯ ಬಗೆಗೆ, ವಿದ್ಯುತ್ತಿನ ಬಗ್ಗೆ ದಿನಕ್ಕೊಂದು ಬಗೆಯ ಹೇಳಿಕೆಗಳನ್ನು ನೀಡುತ್ತಾ ಸಾರ್ವಜನಿಕ ಪ್ರಹಸನ ಆರಂಭಿಸಿದ್ದರು. ಸಿಎಂ ಯಡ್ಡಿಯೂರಪ್ಪ ತಿರುಪತಿಗೆ, ಚೆನ್ನೈ ಗೆ ಮಳೆಗಾಗಿ ಪ್ರಾರ್ಥಿಸಲು ಹೋಗಿದ್ದರು.! ಇನ್ನು ಒಂದು ಹೆಜ್ಜೆ ಮುಂದೆ ಹೋದ ಮೂರ್ಖರು ಸಾರ್ವಜನಿಕರ ತೆರಿಗೆ ಹಣದಲ್ಲಿ ಅನಾಮತ್ತು 33ಲಕ್ಷರೂಪಾಯಿಗಳನ್ನು ರಾಜ್ಯದ ವಿವಿಧ ದೇಗುಲಗಳಲ್ಲಿ ಮಳೆಗಾಗಿ ಪ್ರಾರ್ಥಿಸಲು ವೆಚ್ಚ ಮಾಡಿದರು..! ಕರೆಂಟ್ ಮಂತ್ರಿ ವಿದ್ಯುತ್ ಕಡಿತದ ಬಗ್ಗೆ ಒಂದು ಸ್ಪಷ್ಟ ನಿಲುವು ಪ್ರಕಟಿಸಲಾರದೇ ಹೋದರು. ಪರಿಣಾಮ ಜನ ಅನಿಯಮಿತ ವಿದ್ಯುತ್ ಕಡಿತದಿಂದ ತೊಂದರೆ ಪಡುವಂತಾಯಿತು. ಅಂತೂ ಇಂತೂ ಮುಂಗಾರು ಮಳೆ ಬಂತು ಇವರು ಬಚಾವಾದರು. ಇವರ ಮಂಗಾಟ ಇದೇ ಮೊದಲಲ್ಲ,ಸರ್ಕಾರದ ರಚನೆಯಾದಾಗ ಮುಜುರಾಯಿ ದೇಗುಲಗಳಲ್ಲಿ ಸಿಎಂ ಯಡಿಯೂರಪ್ಪನ ಹೆಸರಿನಲ್ಲಿ ಪ್ರಥಮ ಪೂಜೆ ಸಲ್ಲಿಸುವ ಪ್ರಸ್ತಾಪ ಮಾಡಿ ಮುಜುಗುರ ಅನುಭವಿಸಿದ್ದರು, ನಂತರ ತಿರುಪತಿ ಲಡ್ಡುಗಳನ್ನು ತಂದು ಹಂಚುವ ಕೆಲಸ ಮಾಡಿದರು, ಶಿವರಾತ್ರಿ ಸಂಧರ್ಭದಲ್ಲಿ ಗಂಗಾಜಲವನ್ನು ತಂದು ದೇಗುಲಗಳಿಗೆ ನೀಡಿದರು..! ಇಂತಹ ಮಹಾನ್ ಕಾರ್ಯಗಳಿಂದ ಸಾರ್ವಜನಿಕರಿಗೆ ಆದ ಪ್ರಯೋಜನವೇನು? ಈ ಯೋಜನೆಗಳಿಗೆ ಖಜಾನೆಯಿಂದ ಸಾರ್ವಜನಿಕರ ಎಷ್ಟು ಕೋಟಿ ಹಣ ವೆಚ್ಚವಾಗಿದೆ ಎಂಬುದು ಈಗ ಚರ್ಚೆಯಾಗ ಬೇಕಾಗಿದೆ. ರಾಜ್ಯದಲ್ಲಿ ಮುಜುರಾಯಿಗೆ ಸೇರಿದ ಸಾವಿರಾರು ದೇಗುಲಗಳಿವೆ, ಅವುಗಳ ಜೀರ್ಣೊದ್ದಾರಕ್ಕೆ, ಅದನ್ನು ನೋಡಿಕೊಳ್ಳುವ ಅರ್ಚಕರು, ಪಾರುಪತ್ತೆಗಾರರುಗಳಿಗೆ ಸರಿಯಾದ್ದೊಂದು ದಾರಿ ಮಾಡುವ ಯೋಗ್ಯತೆ ಇಲ್ಲದ ಈ ಸರ್ಕಾರಕ್ಕೆ ಲಾಡು, ಗಂಗಾಜಲ, ಮಳೆಪೂಜೆ ಇವೆಲ್ಲಾ ಬೇಕಾ? ಕಳೆದ ಬಾರಿ ಉತ್ತರ ಕರ್ನಾಟಕದಲ್ಲಿ ತೊಗರಿಗೆ ನಿಗದಿತವಾದ ಬೆಂಬಲ ಬೆಲೆ ಸಿಗಲಿಲ್ಲ, ಹಾಸನ ಜಿಲ್ಲೆಯ ರೈತ ಬೆಳೆದ 100ಕೋಟಿಗೂ ಹೆಚ್ಚು ಮೊತ್ತದ 40ಸಾವಿರ ಹೆಕ್ಟೇರುಗಳಲ್ಲಿ ಬೆಳೆದ ಬೆಳೆ ಹಾಳಾಯ್ತು, ರಾಜ್ಯಾಧ್ಯಂತ ರಸಗೊಬ್ಬರದ ಸಮಸ್ಯೆ ಉಲ್ಭಣಿಸಿತ್ತು, ಹೇಳುವವರು, ಕೇಳುವವರಿಲ್ಲದೇ ಅನಾಥನಾದ ರೈತ ಕಣ್ಣೀರಿಟ್ಟ, ಹತಾಶನಾಗಿ ನೇಣಿಗೆ ಶರಣಾದ ಈ ಬಗ್ಗೆ ಕಿಂಚಿತ್ತ ಕಾಳಜಿ ವಹಿಸದ ಸರ್ಕಾರ ಯಾತಕ್ಕೂ ಬೇಡದ ಯೋಜನೆಗಳನ್ನು ಪ್ರಕಟಿಸುತ್ತಾ ಜನರನ್ನು ವಂಚಿಸಿದೆ, ಕಳೆದ ಎರಡು ಸರ್ಕಾರಗಳಲ್ಲಿ ಬಿತ್ತನೆ ಗೊಬ್ಬರಕ್ಕೆ ಹೆಚ್ಚಿನ ರಿಯಾಯ್ತಿ ಇತ್ತು ಈ ಭಾರಿ ಅದು ಶೇ.25ಕ್ಕೆ ಇಳಿದಿದೆ, ಎತ್ತು ಗಾಡಿ ಯೋಜನೆ ಎಕ್ಕ ಎದ್ದು ಹೋಗಿದೆ. ಹೀಗೆ ವಾಸ್ತವ ನೆಲೆಗಟ್ಟಿನಲ್ಲಿ ಚರ್ಚೆಯಾದಗೆಲ್ಲ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರುವ ಚಾಳಿ ಬೆಳೆಸಿಕೊಂಡಿರುವ ರಾಜ್ಯ ಸರ್ಕಾರ ತನ್ನಲ್ಲಿ ಒಂದು ಗುಪ್ತಚರ ಇಲಾಖೆ ಇದೆ, ತನ್ನ ರಾಜ್ಯದ ರೈತರಿಗೆ ಯಾವ ಗೊಬ್ಬರ ಬೇಕು, ಯಾವಾಗ ಬೇಕು? ಎಂದೆಲ್ಲ ಯೋಚಿಸಿದ್ದರೆ ಸಮಸ್ಯೆ ನಿಬಾಯಿಸುವುದು ಯಾವುದೆ ಸರ್ಕಾರಕ್ಕೂ ಕಷ್ಠ ಸಾಧ್ಯವಲ್ಲ. ಈಗ ಸದನ ಕಲಾಪಗಳು ನಡೆಯಲಾರಂಭಿಸಿವೆ, ಮಾನ್ಯ ಚುನಾಯಿತ ಮಹನೀಯರುಗಳೇ ಸದನದಲ್ಲಿ ಈ ವಿಚಾರ ಚರ್ಚೆಯಾಗಲಿ.
ಇರಲಿ ಹಾಸನ ಜಿಲ್ಲೆ ಈಗ ರಾಜಕೀಯ ಅಸ್ಪೃಶ್ಯತೆಯನ್ನು ಎದುರಿಸುತ್ತಿದೆ, ಎಲ್ಲ ವಿಚಾರಗಳಲ್ಲು ಹಾಳು ರಾಜಕೀಯ ಮುಂದು ಮಾಡಿಕೊಂಡು ಸಾರ್ವಜನಿಕವಾದ, ಅವಶ್ಯಕವಾದ ಅಬಿವೃದ್ದಿ ಕೆಲಸಗಳಿಗೆ ಸಿ ಎಂ ಯಡಿಯೂರಪ್ಪ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ, ಇದು ಕೃಷಿ ಪ್ರಧಾನ ಜಿಲ್ಲೆ , ಆರ್ಥಿಕ ವಲಯದಲ್ಲಿ ಬರುವ ಪ್ರಮುಖ ಜಿಲ್ಲೆ ಹಾಗಿದ್ದಾಗ್ಯೂ ಇಲ್ಲಿನ ಜನರ ನೋವಿಗೆ ದನಿಯಾಗದ ಯಡಿಯೂರಪ್ಪ ಜಿಲ್ಲೆಯ ಜನರನ್ನು ನೋಡಲು ಬಂದಿದ್ದು ಮತಯಾಚನೆಗೆ ಮಾತ್ರ. ಚುನಾವಣೆಗಳಲ್ಲಿ ಜಿಲ್ಲೆಯ ಜನತೆ ಬೇರೆ ರಾಜಕೀಯ ಪಕ್ಷಗಳಿಗೆ ತೋರಿದಷ್ಟೇ ಆದರವನ್ನು ಬಿಜೆಪಿಗೂ ತೋರಿದ್ದಾರೆ. ಹಾಗಿದ್ದಾಗ್ಯೂ ಯಡಿಯೂರಪ್ಪ ಮಲತಾಯಿ ಧೋರಣೆ ತೋರಬಹುದೇ. ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾಗಿದೆ ಜಿಲ್ಲೆಗೆ ನೇಮಕವಾದ ಉಸ್ತುವಾರಿ ಸಚಿವರೇ ನಾಪತ್ತೆಯಾಗಿದ್ದಾರೆ..! ಜಿಲ್ಲೆಯಲ್ಲಿ ಅಧಿಕಾರಿಗಳದ್ದೇ ದರ್ಬಾರು, ಯಾವ ಅಭಿವೃದ್ದಿ ಕೆಲಸವಾಗಬೇಕು, ನಡೆಯುತ್ತಿರುವ ಕೆಲಸ ಯಾವ ಹಂತದಲ್ಲಿದೆ, ಏನು ಅಡಚಣೆಯಾಗಿದೆ, ಜಿಲ್ಲೆಯ ಜನರ ಸಂಕಷ್ಟಗಳೇನು?ಅವರ ನಿರೀಕ್ಷೆಗಳೇನು ಕೇಳಿಸಿಕೊಳ್ಳುವವರು ಯಾರು ಸ್ವಾಮಿ? ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸದನದಲ್ಲಿ ಏನು ಮಾಡುತ್ತಾರೋ ಕಾದು ನೋಡಬೇಕು. ಒಂದು ವೇಳೆ ಅಲ್ಲಿಯೂ ಜಿಲ್ಲೆಯ ಶಾಸಕರುಗಳು ಅಸ್ಪೃಶ್ಯತೆ ಅನುಭವಿಸಿದರೆ ಅದು ಜಿಲ್ಲೆಯ ಜನತೆಗೆ ಶಾಪವೇ...
ಜಿಲ್ಲೆಯ ಯಗಚಿ, ಹೇಮಾವತಿ, ವಾಟೆಹೊಳೆ ಅಣೆಕಟ್ಟೆಯ ಜೊತೆಜೊತೆಗೆ ಕಾವೇರಿ ನದಿಯ ಮೊದಲ ಕಟ್ಟೆ ಎಂದೇ ಹೆಸರಾಗಿರುವ ಕಟ್ಟೇಪುರ ಕಟ್ಟೆ ಭೋರ್ಗರೆದು ಹರಿಯುತ್ತಿವೆ. ಸ್ವಲ್ಪ ಪ್ರಮಾಣದಲ್ಲಿ ಬಿತ್ತನೆಯಾಗಿರುವ ಆಲೂಗಡ್ಡೆ ಯಥಾಪ್ರಕಾರ ರೋಗಕ್ಕೆ ತುತ್ತಾಗಿದೆ, ಉಳಿದಂತೆ ಅಡಿಕೆ,ತಂಬಾಕು, ಹೂವು, ತರಕಾರಿ ಬೆಳೆಗಳು, ಭತ್ತ, ಜೋಳ ಇತ್ಯಾದಿ ಉತ್ತಮವಾಗಿದೆ. ಸಧ್ಯ ಜಿಲ್ಲೆಯಲ್ಲಿ ಗೊಬ್ಬರ ಸಮಸ್ಯೆಯಾಗಿಲ್ಲ. ಅಷ್ಟರಮಟ್ಟಿಗೆ ರೈತ ಸಂತಸದಲ್ಲಿದ್ದಾನೆ.

ಕಾಮೆಂಟ್‌ಗಳಿಲ್ಲ: