ಗುರುವಾರ, ನವೆಂಬರ್ 4, 2010

ಅಕ್ರಮ ಮರಳುಗಾರಿಕೆಗೆ ಕಡಿವಾಣ ಬೀಳದಿದ್ದರೆ ಪ್ರತಿಭಟನೆ:ಶಾಸಕ ಎ. ಮಂಜು

"ಮಾಮೂಲಿ ಎಷ್ಟು ವಸೂಲಿ ಮಾಡ್ತಿದೀರಾ? ಬಡ್ಡಿ ಮಕ್ಕಳಾ ದುಡ್ಡು ಮಾಡ್ಕೊಂಡು ಸುಮ್ನಿರ್ತೀರಾ?ಜನ ಬಯ್ಯೋದು ನಮ್ಗೆ", ಎಷ್ಟು ಫಿಕ್ಸ್ ಮಾಡ್ಕಂಡಿದೀರಾ ಗಾಡಿಗೆ? ಹೀಗೆ ಮುಂದುವರೆದರೆ ಲೋಕಾಯುಕ್ತರಿಗೆ ನಾನೇ ದೂರು ಕೊಡ್ತೀನಿ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಾರಿಗೆ ಅಧಿಕಾರಿಗಳಿಗೆ ಎಚ್ಚರಿಸಿದ್ದು ಶಾಸಕ ಎ. ಮಂಜು.
 ತಾಲ್ಲೂಕಿನಾಧ್ಯಂತ ಅವ್ಯಾಹತವಾಗಿ ನಡೆಯುತ್ತಿರುವ  ಮರಳುದಂಧೆಯಿಂದ ತಾಲ್ಲೂಕಿನ ಪ್ರಮುಖ ರಸ್ತೆಗಳೆಲ್ಲ ಸಂಪೂರ್ಣವಾಗಿ ಹಾಳಾಗಿದ್ದು ರಾಮನಾಥಪುರ ಸೇತುವೆ ಕುಸಿದು ಬಿದ್ದಿದೆ ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ,ಕಂದಾಯ,ಲೋಕೋಪಯೋಗಿ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕೊಣನೂರಿನಲ್ಲಿ ನಡೆಸಿದ ಶಾಸಕ ಎ. ಮಂಜು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಹರೀಶ ಎಂಬಾತನಿಗೆ ಚುರುಕು ಮುಟ್ಟಿಸಿದ ಶಾಸಕ ಮಂಜು ಇದಕ್ಕೆಲ್ಲಾ ತಡೆಬೀಳಬೇಕು ಎಂದು ತಾಕೀತು ಮಾಡಿದರು. ಆರ್ ಟಿ ಓ ಅಧಿಕಾರಿಗಳಿಗೆ ತಾಲೂಕಿನಲ್ಲಿ ಎಷ್ಟು ಕಡೆ ಮರಳು ತೆಗೆಯಲು ಟೆಂಡರು ಆಗಿದೆಯೆಂಬುದೇ ತಿಳಿದಿಲ್ಲ ಈ ವಿಚಾರದಲ್ಲಿ ಅಧಿಕಾರಿಗಳಿಗೆ ಸಮನ್ವಯದ ಕೊರತೆಯಿದೆ ಇಂತಹದ್ದನ್ನೆಲ್ಲ ನಾನು ಸಹಿಸುವುದಿಲ್ಲ, ತಾಲೂಕಿನ ರಸ್ತೆಗಳಲ್ಲಿ ಅಧಿಕ ಭಾರದ ಲಾರಿಗಳು ಓಡಾಡುತ್ತಿವೆ ನಿಗದಿತ ಮಿತಿಗಿಂತ ಅಧಿಕ ಪ್ರಮಾಣದ ಮರಳನ್ನು ಸಾಗಾಣಿಕೆ ಮಾಡಲಾಗುತ್ತಿದೆ ಇದಕ್ಕೆ ತಕ್ಷಣವೇ ಕಡಿವಾಣ ಹಾಕಿ ಎಂದು ನುಡಿದ ಅವರು ಪೋಲೀಸ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿಯನ್ನು ಕುರಿತು "ಪ್ರಾಮಾಣಿಕರಂತೆ ಮಾತನಾಡ ಬೇಡಿ ನಿಮ್ಮ ಇಲಾಖೆಯ ಪೇದೆ ಪರಮೇಶ ಪ್ರತೀ ಮರಳು ಲಾರಿಯಿಂದ 300ರೂಪಾಯಿಗಳನ್ನು ವಸೂಲು ಮಾಡುತ್ತಿದ್ದಾನೆಂಬ ದೂರಿದೆ ಅದನ್ನು ತಕ್ಷಣವೇ ನಿಲ್ಲಿಸಿ ಎಂದರು. ತಾಲೂಕಿನಲ್ಲಿ ಈ ವರೆಗೆ ಕೇವಲ 15ಲಾರಿಗಳನ್ನು ಮಾತ್ರ ಹಿಡಿಯಲಾಗಿದೆ, ಪ್ರತಿ ನಿತ್ಯ ನೂರಾರು ಲಾರಿಗಳು ನಿಯಮ ಉಲ್ಲಂಘಿಸಿ ಮರಳು ಸಾಗಿಸುತ್ತಿವೆ ಇದು ಹೀಗೆ ಮುಂದುವರೆದರೆ ಲೋಕಾಯುಕ್ತರಿಗೆ ದೂರು ನೀಡಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿ ನಂತರ ಹೊರಬಂದ ವಿವಿಧ ಇಲಾಖೆಗಳ ಅಧಿಕಾರಿಗಳು ನಿಯಮ ಉಲ್ಲಂಘಿಸಿದ ಲಾರಿ ಹಿಡಿದರೆ ಜನಪ್ರತಿನಿಧಿಗಳೇ ಫೋನು ಮಾಡುತ್ತಾರೆ ನಮಗೆ ಒತ್ತಡವಿಲ್ಲದೇ ಕೆಲಸ ನಿರ್ವಹಿಸಲು ಬಿಡುತ್ತಿಲ್ಲ ಎಂದು ಪತ್ರಕರ್ತರೊಂದಿಗೆ ಅಸಮಧಾನ ಪ್ರದರ್ಶಿಸಿದರು.

ಕಾಮೆಂಟ್‌ಗಳಿಲ್ಲ: