ಸೋಮವಾರ, ಅಕ್ಟೋಬರ್ 4, 2010

ಉದ್ಯೋಗ ಖಾತ್ರಿ ಕೂಲಿ ಬಡುಗಡೆಗೆ ಪ್ರತಿಭಟನಾ ಧರಣಿ



ಅರಕಲಗೂಡು:ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ತಕ್ಷಣವೇ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ತಾಲ್ಲೂಕು ಕಛೇರಿ ಎದುರು ಧರಣಿ ನಡೆಸಿದರು. ಜಡಿಎಸ್ ಮುಖಂಡ ಬೊಮ್ಮೇಗೌಡ ಮಾತನಾಡಿ ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ನಡೆಸಲಾಗಿದೆ ಕಳೆದ 10ತಿಂಗಳಿನಿಂದ ಕೂಲಿ ವೆಚ್ಚ ನೀಡಿಲ್ಲ, ಬದಲಾಗಿ ಸರಕು ಸಾಮಗ್ರಿ ಬಿಲ್ ಗಳನ್ನು ಪಾವತಿಸಲಾಗಿದೆ, ಅಧಿಕಾರಿಗಳು ಕೂಲಿ ಹಣವನ್ನು ಪಾವತಿಸದೇ ವಂಚಿಸಿದ್ದಾರೆ ಅವರಿಗೆ ಅಮಾನತ್ತು ಶಿಕ್ಷೆಯಲ್ಲ, ಜೈಲಿಗೆ ಅಟ್ಟಿ ಹಣವನ್ನು ವಸೂಲಿ ಮಾಡಿ ಎಂದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾ.ಪಂ ಅಧ್ಯಕ್ಷ ಎಚ್ ಮಾದೇಶ್ ಮಾತನಾಡಿ ಕ್ರಿಯಾಯೋಜನೆಯಲ್ಲಿ ಸೇರದ ಕೆಲಸಗಳಿಗೆ ಸರಕು ಸಾಮಾಗ್ರಿ ಬಿಲ್ ಗಳನ್ನು ತಯಾರಿಸಿ 3ಕೋಟಿ ಗೂ ಹೆಚ್ಚು ಹಣವನ್ನು ಲೂಟಿ ಮಾಡಿದ ಅಧಿಕಾರಿಗಳು ಅಮಾನತ್ತಿನ ನೆವದಲ್ಲಿ ಹೆಂಡತಿ ಮಕ್ಕಳ ಜೊತೆ ಮೋಜಿನ ಪ್ರವಾಸ ಕೈಗೊಂಡಿದ್ದಾರೆ, ಕೆಲಸ ಮಾಡಿದ ಕೂಲಿಕಾರರು ಕೂಲಿಗೂ ಗತಿಯಿಲ್ಲದೇ ಪರಿತಪಿಸುತ್ತಿದ್ದಾರೆ ಇಂತಹ ಸ್ಥಿತಿಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ದ ತಕ್ಷಣವೇ ಸೂಕ್ತ ಕ್ರಮ ಜರುಗಿಸಿ ಹಣವಸೂಲಿಗೆ ಕ್ರಮ ಜರುಗಿಸಬೇಕು ಎಂದರು. ಜಿ.ಪಂ. ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ ಯೋಜನೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿದೆ ಪರಿಣಾಮವಾಗಿ ಅಭಿವೃದ್ದಿ ಕಾರ್ಯಗಳಿಗೆ ಹಿನ್ನೆಡೆ ಆಗಿದೆ, ಜನ ಕೂಲಿ ಇಲ್ಲದೇ ಪರಿತಪಿಸುತ್ತಿದ್ದಾರೆ ಆದ್ದರಿಂದ ತಕ್ಷಣವೇ ಹಣ ಬಿಡುಗಡೆಗೆ ಸರ್ಕಾರ ಗಮನಹರಿಸಬೇಕು ಎಂದರು. ಜಿ.ಪಂ ಸದಸ್ಯ ಎಚ್ ಎಸ್ ಶಂಕರ್ ಮಾತನಾಡಿ ಅಧಿಕಾರಿಗಳು ಯೋಜನೆಯನ್ನು ದಿಕ್ಕು ತಪ್ಪಿಸಿದ್ದಾರೆ, ತಕ್ಷಣ ಕೂಲಿ ಬಿಡುಗಡೆ ಮಾಡಿ ಅಕ್ರಮದಲ್ಲಿ ಪಾಲ್ಗೊಂಡವರ ವಿರುದ್ದ ಕ್ರಮವಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು. ಜಿ.ಪಂ. ಸದಸ್ಯರಾದ ಬಿ ಜೆ ಅಪ್ಪಣ್ಣ, ನೀರುಬಳಕೆದಾರರ ಮಹಾಮಂಡಲದ ಮಾಜಿ ಅಧ್ಯಕ್ಷ ದೊಡ್ಡೇಗೌಢ, ಮುಖಂಡರಾದ ಜನಾರ್ಧನಗುಪ್ತ, ಮತ್ತಿತರರು ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ಹಾಗೂ ಮುಖಂಡರಾದ ಕೇಶವಮೂರ್ತಿ ವಹಿಸಿದ್ದರು. ಪ್ರತಿಭಟನಾಕಾರರು ಮನವಿ ಪತ್ರವನ್ನು ತಹಸೀಲ್ದಾರ್ ಸವಿತಾ ಅವರಿಗೆ ಸಲ್ಲಿಸಿದರು.


ಅರಕಲಗೂಡು:ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಅ.5ರಂದು ಬೆಳಿಗ್ಗೆ 11ಗಂಟೆಗೆ ಕರೆಯಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ತಾಲ್ಲಕು ಪಂಚಾಯ್ತಿ ಅಧ್ಯಕ್ಷ ಮಾದೇಶ್ ಸಭೆಯ ಅಧ್ಯಕ್ಷತೆ ವಹಿಸುವರು.

ಪ್ರತಿಭಟನೆ: ಕೊಣನೂರು ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಪರಿವರ್ತಿಸುವವರೆಗೆ ಸಾರ್ವಜನಿಕ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ವಿವಿಧ ಪಕ್ಷಗಳ ಮುಖಂಡರು ತೀರ್ಮಾನಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಅ.5ರಿಂದ ಗ್ರಾಮ ಪಂಚಾಯ್ತಿ ಎದರು ಅನಿರ್ಧಿಷ್ಠಾವದಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಮತ್ತು ಯಾರೂ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಹೋರಾಟ ಸಮಿತಿಯ ಮುಖಂಡ ಕಬ್ಬಳಿಗೆರೆ ಬೈರೇಗೌಡ ಹೇಳಿದ್ದಾರೆ. ಇಂದು ಕೋಟೆ ಕೋಡಿ ಅಮ್ಮನ ದೇಗುಲದಲ್ಲಿ ನಡೆದ ಸರ್ವಪಕ್ಷದ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿ.ಪಂ. ಸದಸ್ಯ ಅಪ್ಪಣ್ಣ, ಮುಖಂಡರಾದ ಚೌಡೇಗೌಡ,ತಾ.ಪಂ. ಸದಸ್ಯ ಶ್ರೀನಿವಾಸ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ: